ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಮಂಗಳವಾರ, ಡಿಸೆಂಬರ್ 21, 2010

ಪಾನಿಪುರಿ ತಟ್ಟೆಯಡಿ ನನ್ನ ಮರ್ಯಾದೆ…!



ಸುಮಾರು ಐದು ವರ್ಷಗಳ ಹಿಂದಿನ ಮಾತು.'ಸುಧಾ'ದಲ್ಲಿ ಪ್ರಕಟವಾಗಿದ್ದ ಲೇಖನವೊಂದರ ಬಗ್ಗೆ ನನ್ನ ಅಭಿಪ್ರಾಯವನ್ನು ಪುಟ್ಟದೊಂದು ಪೋಸ್ಟ್ ಕಾರ್ಡಿನಲ್ಲಿ ಬರೆದು ಕಳಿಸಿದ್ದೆ. 'ಸಮುದ್ರ ಮಥನ'ವಿಭಾಗದಲ್ಲಿ ಅದು ಪ್ರಕಟವಾಗಿತ್ತು. ಕೇವಲ ಏಳೆಂಟು ವಾಕ್ಯಗಳು ಪ್ರಕಟವಾಗಿದ್ದರು ನನಗಂತೂ ಹಿರಿ ಹಿರಿ ಹಿಗ್ಗು. ಮೊದಲ ಬಾರಿಗೆ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ನನ್ನ ಬರಹ ಪ್ರಕಟವಾಗಿತ್ತು.'ಸುಧಾ'ದ ಆ ಸಂಚಿಕೆ ಅಂಗಡಿಗಳ ಮುಂಬಾಗದಲ್ಲಿ ನೇತಾಡುತ್ತಿದ್ದುದನ್ನು ಕಂಡು ಒಂಥರಾ ಖುಷಿಯಾಗುತ್ತಿತ್ತು. ನನ್ನ ಹೆಸರಿರುವ ಪತ್ರಿಕೆ ಹೀಗೆ ರಾಜ್ಯದ ಮೂಲೆ-ಮೂಲೆಯ ಎಲ್ಲ ಅಂಗಡಿಗಳಲ್ಲಿ ಇರುವುದನ್ನು ಕಲ್ಪಿಸಿಕೊಂಡೇ ರೋಮಂಚನಗೊಳ್ಳುತ್ತಿದ್ದೆ. ನಾನು ಕೊಂಡು ತಂದ ಒಂದು ಪ್ರತಿಯಲ್ಲಿನ ಆ ಪುಟವನ್ನೇ ನೋಡುತ್ತಾ, ಲೆಕ್ಕವಿಲ್ಲದಷ್ಟು ಬಾರಿ ಓದುತ್ತಾ ಏನೇನೋ ಕನಸು ಕಾಣುತ್ತಿದ್ದೆ. ಪತ್ರಿಕೆಯ ಪುಟಗಳು ಎಲ್ಲಿ ಮುದುರಿ ಹರಿದು ಹೋದಿತೋ ಎಂಬ ಭಯದಿಂದ ಯಾರ ಕೈಗೂ ಕೊಡುತ್ತಿರಲಿಲ್ಲ…!
ಒಮ್ಮೆ ಹೀಗೇ ಅದನ್ನು ಮತ್ತೊಮ್ಮೆ ಓದಿ, ಮೃದುವಾಗಿ ಸವರಿ ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಟೇಬಲ್ ಮೇಲೆ ಇಟ್ಟು ಹೋಗಿದ್ದೆ. ಸಂಜೆ ಬಂದು ನೋಡುವಾಗ ಶಾಕ್! ನನ್ನ ಅಕ್ಕನ ಎರೆಡು ವರ್ಷದ ಪುಟ್ಟ ಮಗ ಸುಧಾದ ಪುಟಪುಟಗಳನ್ನು ಪ್ರತ್ಯೆಕವಾಗಿಸಿ ಮೂಲೆ-ಮೂಲೆಗೂ ಎಸೆದಿದ್ದ. ನನ್ನ ಬರಹವಿದ್ದ ಪುಟವಂತು ಚಿಂದಿ-ಚಿತ್ರಾನ್ನ!!

''ಯಾರೋ ಹೀಗ್ ಮಾಡಿದ್ದೂ…?'' ಅಂತ ಕೋಪದಿಂದ ಅವನನ್ನು ಗದರಿದೆ. ಅವನೋ ಬಹಳ ಹೆಮ್ಮೆಯಿಂದ ತಾನೇ ಎಂಬಂತೆ ಕಿಲಕಿಲ ನಕ್ಕ! ಅವನ ನಗುವಿನ ಮುಂದೆ ನನ್ನ ಸಿಟ್ಟು ಕರಗಿ ಹೋಯಿತು. ನನ್ನ ಬರಹದ ವಿಚಾರವನ್ನೇ ಮರೆತು ಅವನನ್ನು ಮುದ್ದಿಸತೊಡಗಿದೆ…
*********************

ಗೆಳೆಯರೆಲ್ಲ ಸೇರಿ ದಿನಾ ಸಂಜೆ ರಸ್ತೆ ಬದಿ ಪಾನಿಪುರಿ ತಿನ್ನುವುದು ನಮ್ಮ ರೂಡಿ. ಒಂದು ದಿನ ಹೀಗೇ ಹರಟುತ್ತಾ ತಿನ್ನುತ್ತಿದ್ದೆವು. ಸಾಮಾನ್ಯವಾಗಿ ಯಾವುದೇ ಹಳೆಯ ಪೇಪರಿನ ತುಂಡು ಸಿಕ್ಕರೂ ಅದನ್ನೂ ಬಿಡದೇ ಓದುವುದು ನನ್ನ ದುರಭ್ಯಾಸಗಳಲ್ಲೊಂದು. ಹೀಗೇ ಅವತ್ತು ಕೂಡಾ ಪಾನಿಪುರಿ ತಿಂದಾದಮೇಲೆ ಕೈ ಒರೆಸಲೆಂದು ಕೊಟ್ಟ ಪೇಪರಿನ ತುಂಡಿನ ಮೇಲೆ ಕಣ್ಣಾಡಿಸಿದೆ. ಸ್ಥಳೀಯ ಪತ್ರಿಕೆಯೊಂದರಲ್ಲಿ ನಾನೇ ಬರೆದ ಲೇಖನದ ಅರ್ಧ ಭಾಗ ಅಲ್ಲಿತ್ತು! ಛೆ! ನನ್ನ ವೈಚಾರಿಕ ಬರಹ ಕೈ ಒರೆಸಲು ಬಳಸಲ್ಪಡುತ್ತಿರುವುದೇ?? ಅಳು ಬರುವುದೊಂದೇ ಬಾಕಿ. ಸಣ್ಣ ಪುಟ್ಟ ಲೇಖನ-ಕವನ ಬರೆದು ದೊಡ್ಡ ಲೇಖಕನಂತೆ ಗೆಳೆಯರ ಮುಂದೆ ಫೋಸು ಕೊಡುತ್ತಿದ್ದವನಿಗೆ ಆದ ಅವಮಾನ ಅಷ್ಟಿಷ್ಟಲ್ಲ… ಸ್ನೇಹಿತರೆಲ್ಲರೂ ಸಮಾಧಾನ ಹೇಳಿದರೂ ರಾತ್ರಿಯೆಲ್ಲ ಮನದಲ್ಲಿ ಅದೇ ಯೋಚನೆ.. ಹಾಗಿದ್ದರೆ ನಾನು ಬರೆವುದೇತಕ್ಕೆ? ಛೇ! ಇನ್ನು ಯಾವತ್ತೂ ಬರೆಯಬಾರದೆಂಬ ಕಠಿಣ ನಿರ್ಧಾರ ಮಾಡಿ ಮಲಗಿದೆ…
ಆದರೆ ನನ್ನ ಅಕ್ಷರ ಸನ್ಯಾಸ ಎರೆಡೆ ವಾರಕ್ಕೆ ಕೊನೆಗೊಂಡಿದ್ದು ಮಾತ್ರ ವಿಪರ್ಯಾಸ…!!

ಭಾನುವಾರ, ಜುಲೈ 4, 2010

ಕಲ್ಲು ಹೃದಯ ಹೇಳಿದ್ದು...

ಕಲ್ಲು ಹೃದಯ ಹೇಳಿದ್ದು...
ಬೇಕಿಲ್ಲವೆನಗೆ
ಅ ಗರ್ಭ ಗುಡಿಯೊಳಗಿನ
ದುರ್ಭರ ಬದುಕು
ಮಲಗಿರುವೆ ಇಲ್ಲಿಯೇ
ಮರದ ಬುಡದಲ್ಲಿ
ಬಿಸಿಲಿಗೆ ಮೈಯೊಡ್ಡಿಯೂ ಆರಾಮವಾಗಿ...

ಯಾರಿಗೆ ಬೇಕು ಹೇಳಿ
ಇಲ್ಲಿಂದ ಉರುಳಿಸಿಕೊಂಡು
ಮತ್ತೆಲ್ಲಿಗೋ ತೆರಳಿ ನೀರಲ್ಲಿ ಮುಳುಗಿ
ಅವರಿಗೆ ಬೇಕಾದ ಹಾಗೆ
ಕೆತ್ತಿಸಿಕೊಂಡು
ಸತ್ತು ಹೋಗುವ ಬದುಕು...?
ಇದ್ದು ಬಿಡುವೆ ಇಲ್ಲಿಯೇ
ಗಾಳಿಗೆ ಮೈದೆರೆದು
ನಿಧ-ನಿಧಾನವಾಗಿ ಸವೆ-ಸವೆದು...

ಬೇಡವೆನಗೆ ಆ ನಿಮ್ಮ
ಸುಗಂಧ, ಹಾರ, ಧೂಪ, ನೈವೇದ್ಯ
ಪಂಚಾಮೃತದ ಅಭಿಷೇಕ, ಗೊಣ-ಗೊಣ ಮಂತ್ರ
ಸುತ್ತ ಗೋಡೆ ಕಟ್ಟಿ
ಕತ್ತಲು ಮಾಡಿ ಮತ್ತೆ ಹಚ್ಚುವ ದೀಪ
ಆರತಿಯ ಉಸಿರುಗಟ್ಟಿಸುವ ಹೊಗೆ
ಸಾಕೆನಗೆ ಈ ಬೆಳಕು
ಅರಳಿದ ಸಂಪಿಗೆಯ ಘಮ
ಆಗಾಗ ತೊಳೆವ ಮಳೆ
ಹಕ್ಕಿಗಳಿಂಚರ
ಮೈಮೆಲೆಹರಿವ ಇರುವೆಯ ಮಧುರ ಸ್ಪರ್ಶ...

ಬೇಕಿಲ್ಲವೆನಗೆ ಅಡ್ಡಡ್ಡ ಬೀಳುವ ಭಕ್ತಾಭಿಮಾನಿಗಳು
ಆ ದುಡ್ಡು ಆ ಮಂತ್ರ ಆ ಗವಿ ಆ ಅಂಧಕಾರ..
ಇಲ್ಲೇ ಬಿದ್ದಿರುವೆ ಹೀಗೆ
ಅನಾಥವಾಗಿ ಸವೆಯುತ್ತ
ಸವಿಯುತ್ತ
ಮುಂಜಾನೆಯ ಸೂರ್ಯೋದಯ
ಸಂಜೆಯ ಸುಂದರ ರಾಗ..
ನಿಸರ್ಗದ ನಿನಾದವ ಆಲಿಸುತ್ತ
ಹೀಗೆ ಬಿದ್ದಿರಲು ಬಿಡಿ ಇಲ್ಲೇ
ಎಂದೆಂದಿಗೂ...

ಶುಕ್ರವಾರ, ಜುಲೈ 2, 2010

ರನ್ನ ಚರಿತ

ಹತ್ತನೆಯ ಶತಮಾನದೋಳ್
ತಾನ್ ಬರೆದ
ಮಹಾಭಾರತದ
‘ಸಾಹಸ ಭೀಮ ವಿಜಯ೦’
ಎಂಬ ಕೃತಿಯ೦
ಪ್ರಸ್ತುತ
ಇಪ್ಪತ್ತೊ೦ದನೆಯ ಶತಮಾನದೋಳ್
‘ನವಭಾರತ’ವೆಂಬ ಪೆಸರೋಳ್
ಚಲನಚಿತ್ರವಾಗಿರ್ಪದೆ೦ಬ
ಮಿಥ್ಯ ಸುದ್ದಿಯಂ ಕೇಳಿ
ತಡಬಡಿಸಿ ಸ್ವರ್ಗದಿಂದಿಳಿದು
ಬ೦ದನಾರನ್ನ ಮಹಾಶಯನ೦
ಭುವಿಯಲವತರಿಸಿ
ತನ್ನ ನಾಡಾಲ್ ಇರ್ಪ ಒ೦ದು
ಸಿನೆಮಾ ಥಿಯೇಟರ೦ ಪೊಕ್ಕು
ಆ ಚಲನಚಿತ್ರ೦ ನೋಳ್ಪೆ
ಆ ಲಲನೆಯರ ಕಂಡು
ಅರೆಕ್ಷಣದಲ್ಲಿ
ಹೆದರಿ-ಬೆದರಿ ಬೆವರ್ಪಲಾಗಿ
ಪ್ರಜ್ಞೆ ತಪ್ಪಿ ಭುವಿಗುರುಳಿ
ಮತ್ತೆ ಮಣ್ಣಾದನಾ ರನ್ನ ಭೂಪ೦…!

ವರ್ಣನೆ…

ಎಲ್ಲ ಸುಂದರಿಯರಂತೆ
ನನ್ನವಳಿಗೂ ಎರೆಡು ಕಣ್ಣು,
ಚಂದಿರನ ಮೇಲಿನ ಕಪ್ಪು ಕಲೆಗಳ ಹಾಗೆ !
ಮತ್ತೆರೆಡು ಕಿವಿ,ಅವೋ ಗಜದಗಲ…
ಮೂಗು…?
ಅದು ಒಂದೇ
ಅದರಲ್ಲಿದೆ ಎರೆದು ರಂಧ್ರ,
ಇಲಿಯ ಬಿಲದ ಹಾಗೆ…!
ಮತ್ತ್ತೆ ಯಥಾ ಪ್ರಕಾರ
ತುಟಿ ತೊಂಡೆಯ ಹಾಗೆ
ಹಲ್ಲು ಕೆಂಪು-ಕೆಂಪು ಹೈಬ್ರಿಡ್ ದಾಳಿಂಬೆಯ ಹಾಗೆ…!
ಗಲ್ಲ ಕರಿ ಇರುವೆ ಮುಟ್ಟಿದ ಬೆಲ್ಲದ ಹಾಗೆ…!
ಕೇಶರಾಶಿಯೋ …
ಬೆಳ್ಳಿ ಮೋಡದ ಹಾಗೆ…!
ಮತ್ತೆ ನೋಡದ ಹಾಗೆ….!!!!

ಹುಡುಗರಿಗೆ ಟೈಮೇ ಇಲ್ಲ…!

ಏನ್ಮಾಡೋಣ ಹೇಳಿ
ನಮ್ಮ ಹುಡುಗರಿಗೆ
ಓದಲು ಟೈಮೇ ಇಲ್ಲ…
ದಿನಕ್ಕೆ ಬರೀ ಇಪ್ಪತ್ನಾಲ್ಕು ಗಂಟೆ
ವಾರಕ್ಕೆ ಏಳೇ ಏಳು ದಿನ
ಇಷ್ಟೇನೇ…ಸಾಕಾಗೋದಿಲ್ಲ

ಎಂಟು ಗಂಟೆಗೆ
ಮೊದಲೇ ಎದ್ದರೆ
ಮುಂಜಾನೆ ಸೂರ್ಯನಿಗೆ ಅವಮಾನ
ಸ್ನಾನ,ತಿಂಡಿ
ಒಂದಿಷ್ಟು ಹೊತ್ತು ಕನ್ನಡಿ
ಲೆಕ್ಚರು ಬರುವ ಮೊದಲೇ ಕ್ಲಾಸಲ್ಲ್ಲಿ ಕೂರುವುದು ಅಪಮಾನ!

ಐದೇ ಐದು ನಿಮಿಷ
ತಡವಾಯ್ತು ಕ್ಲಾಸಿಗೆ, ಅಡ್ಡಿಯಿಲ್ಲ
ಮತ್ತೆ ಇದ್ದೆ ಇದೆಯಲ್ಲ ದಿಂಬಿಲ್ಲದ ನಿದ್ದೆ…?!
ಆಗಾಗ ಬರುವ ಬೇರೆ ಲೆಕ್ಚರು
ಹೆಸರಿಗಷ್ಟೇ ಪ್ರಾಕ್ತಿಕಲ್ಲು
ಎಲ್ಲ ಕನಸಿನ ಹಾಗೆ ಇದ್ದಿದ್ದೆ…!

ಮದ್ಯಾಹ್ನ ಎರೆಡು ಚಪಾತಿ, ಮುದ್ದೆ, ಅನ್ನ-ಸಾಂಬಾರು
ಮತ್ತೆ ಕ್ಲಾಸಲ್ಲಿ ಕಣ್ ಬಿಟ್ಟೇ ಗಡದ್ದಾಗಿ ಗೊರೆಕೆರಹಿತ ನಿದ್ದೆ
ಮತ್ತೆ ಆಗಾಗ ಆಕಳಿಕೆ
ಸಂಜೆ ನಾಲ್ಕೂವರೆಗೆ ಜೈಲಿಂದ ಬಿಡುಗಡೆ
ಮತ್ತೊಂದಿಷ್ಟು ಹೊತ್ತು ಆಡಲಿಕ್ಕೆ

ಆಮೇಲೆ ಒಂದಿಷ್ಟು ಬಜ್ಜಿ,ಗೋಭಿ
ಆಮ್ಲೇಟು, ನೂಡಲ್ಸು
ಅಂಗಡಿಯವನನ್ನು ದಿನಾ ಉದ್ದಾರ ಮಾಡದಿರಲಾದೀತೇ?
ಎಂಟು ಗಂಟೆಗೆ ಊಟ
ನಂತರ ಒಂದೆರೆಡು ಹಾಲಿವುಡ್ ಸಿನಿಮಾ ನೋಟ
ಮತ್ತೆ ಹುಡುಗಿಯರ ಜೊತೆ ಗಂಟೆಗಟ್ಟಲೆ ಹರಟೆ
ಸಿಕ್ಕ-ಸಿಕ್ಕವರಿಗೆಲ್ಲಾ ಮೆಸೇಜು…

ಮತ್ತೆ ಗೆಳೆಯರ ರೂಮಿಗೆ ತೆರಳಿ
ಅವರಿವರ ಬಗ್ಗೆ ಮಾತುಕತೆ-ಪುರಾಣ
ಇನ್ನೊಬ್ಬರ ಪ್ರೀತಿಯ ವಿಚಾರ-ಇವರ ಬಾಯಿಗೆ ಆಹಾರ…!
ದಿನವಿಡೀ ಬಳಲಿ
ಮೆತ್ತನೆಯ ಹಾಸಿಗೆಯಲಿ ಉರುಳಿ
ಕಣ್ಮುಚ್ಚುತ್ತಿದ್ದಂತೆಯೇ ನಿದ್ರಾದೇವಿಗೆ ಹಾರ..!

ಇನ್ನು ಭಾನುವಾರಗಳೋ…
ಲೇಟಾಗಿ ಎದ್ದು,ಬಟ್ಟೆ-ಗಿಟ್ಟೆ ಒಗೆದು
ಗಡಿಬಿದಿಯಲ್ಲೇ ಓಟ;
ನೆಚ್ಚಿನ ಹೀರೋನ ಹೊಸ ಸಿನೆಮಾ
ಕೂಡಲೇ ನೋಡದಿದ್ದರೆ
ಗಂಟಲಲ್ಲಿಳಿದೀತೆ ಊಟ…?!

ಲೈಬ್ರರಿ ಇರುವುದೋ
ಶುಕ್ರವಾರದ ಸಿನೆಮಾ ರಂಜನೆ
ನೋಡ(ಓದ)ಲಿಕ್ಕೆ…
ಆಗಾಗ ವಕ್ಕರಿಸುವ ಪರೀಕ್ಷೆಗಳೋ
ದಿನಾ ಸಾಯೋರಿಗೆ ಅಳುವುದೆತಕ್ಕೆ?

ಛೆ…! ಪಾಪ
ಏನ್ಮಾಡೋಣ ಹೇಳಿ
ನಮ್ಮ ಹುಡುಗರಿಗೆ
ಓದಲು ಟೈಮೇ ಇಲ್ಲ…!!!

ಭಾವ ಬಿಂದುಗಳು...

ಕಾರಣ
ಇನ್ನು
ಸೂರ್ಯ ಬರುವ
ಹೊತ್ತಾಯಿತೆಂದು
ಮೊಂಬತ್ತಿ
ಮುಗಿದುಹೋಯಿತು…
~~~~~~~~
ವಿ-ಚಿತ್ರ
ನೋಟ್ ಬುಕ್ಕಿನ
ನಡುವೆ
ಸಿಕ್ಕಿ ಸತ್ತ
ನೊಣ
ತನ್ನ ಚಿತ್ರ
ತಾನೇ
ಬಿಡಿಸಿಕೊಂಡಿತು…
~~~~~~~
ಕಾಯುವಿಕೆ
ಕಾದು ಕುಳಿತಳು
ಶಬರಿ
ಬಿಸಿಲಲ್ಲಿ
ಕಾದು ಬರುವ
ರಾಮನಿಗಾಗಿ…
~~~~~~~~
ವಿಷಾದ
ನಗರದ ನೂರಾರು
ಬೀದಿ ದೀಪಗಳ ನಡುವೆ
ತಾರೆಗಳ ಮಿನುಗು
ಮಂಕಾಯಿತು…
~~~~~~~~
ನಿರ್ಧಾರ
ಹೂವಾಗಿ ನಾನು
ಬಾಡಿದರೇನು…?
ಕಾಯಾಗಿ
ಹಣ್ಣಾಗಿ
ಮತ್ತೆ ಅರಳುವೆನು…
~~~~~~~
ಪಾಂಚಾಲಿ
ಒಂದೇ
ಹೂವಿಗೆ
ಐದು
ದುಂಬಿಗಳು….

ಅನರ್ಥಕೋಶ


ನಾ. ಕಸ್ತೂರಿಯವರ ‘ಅನರ್ಥಕೋಶ’ ಯಾರಿಗೆ ಗೊತ್ತಿಲ್ಲ ಹೇಳಿ…? ಪದಗಳನ್ನು ತಿರು ತಿರುಚಿ ಹೊಸ ಅರ್ಥಗಳನ್ನು ಹೊರಡಿಸುವಲ್ಲಿ ಅವರು ಪ್ರವೀಣರು.

ಅದೇ ಮಾದರಿಯಲ್ಲಿ ಇಲ್ಲೊಂದಿಷ್ಟು ಪದಗಳಿವೆ… ನಿಮಗೆ ಇಷ್ಟವಾದೀತು….
~~~~~~~~~~~~~~~~~~~~~~~~~~~~~~~~
ಮೃತ: ಅಮೃತವನ್ನು ಸೇವಿಸದಿದ್ದುದರ ಪರಿಣಾಮ…!
ಸಂಗಾತಿ: ಸಂಗ ಅತಿಯಾದರೆ ಮಾಡಿಕೊಳ್ಳಲೆಬೇಕಾದ ಒಂದು ಸಂಬಂಧ!
ಪಾರ್ಥೇನಿಯಂ: ಪರಾಕ್ರಮಿ ಪಾರ್ಥನೇ ಸೋಲಿಸಲಾಗದ ಒಂದು ಸಸ್ಯ..!
ಮಾರ್ಕ್ಸ್ ವಾದಿ: ಮಾರ್ಕ್ಸ್(ಅಂಕ) ಕೊಟ್ಟಿದ್ದು ಸಾಕಾಗಲಿಲ್ಲ, ಇನ್ನೂ ಬೇಕೆಂದು ಲೆಕ್ಚರ್ ಜೊತೆ ವಾದಿಸುವ ವಿದ್ಯಾರ್ಥಿ…!
ಲಕ್ಸ್: ಒಂದಕ್ಕಿಂತ ಹೆಚ್ಚು ಬಾರಿ ಬಂದ ಅದೃಷ್ಟ..!

ಮಧುರ ಮಧುರವೀ ಮಳೆಗಾಲ…(ಒಂದಿಷ್ಟು ಮಳೆಗವಿತೆಗಳು)




ನಾಸಿಕ ಧಾರೆ
ಮನದೊಳಗೆ ತುಂಬಿದ್ದ
ಕೊಳೆಯೆಲ್ಲ
ತೊಳೆತೊಳೆದು
ಕೆಳಗಿಳಿಯುತಿದೆ
ಮಳೆಗಾಲದಿ
ಮೂಗಿನಿಂದ…!
~~~~~~~~~~~~~~

ಕಾರಣ
ಸೂರ್ಯ ನನ್ನನ್ನು
ಸುಡುತ್ತಾನೆ೦ದು
ಕಾರ್ಮೋಡ ಅತ್ತು-ಅತ್ತು
ಮಂಜೆಲ್ಲ ಕರಗಿ
ಮಳೆಹನಿಯಾಗಿ
ಭೂಮಿಗೆ ಬಿತ್ತು..
~~~~~~~~~~~~~~~~~~
ನಿರ್ಧಾರ
ಬೇಸಿಗೆಯ
ಬರಗಾಲದಿ
ಜನ ನೀರಿಗಾಗಿ
ಪರದಾಡುತ್ತಿರುವಾಗ
ಬೇಸತ್ತು
ಮೇಲಿಂದ ಹಾರಿ
ಸಾಯೋಣವೆಂದು
ನಿರ್ಧರಿಸಿದವು
ಆಗಸದ ಕಾರ್ಮೋಡಗಳು..
~~~~~~~~~~~~~~~~
ತುಂತುರು
ಮೋಡದ
ಗೂಡೊಳಗೆ
ಕುಳಿತ ಪುಟ್ಟ
ನೀರು ಹಕ್ಕಿಯ
ಮರಿಗಳು
ಭಾರ ತಾಳದೆ
ಹಾರಲಾಗದೆ
ಭುವಿಗುರುಳಿದವು
~~~~~~~~~~~~~~~~~
ಮಳೆ ಬಂದಾಗ
ಭಾವದ ಬಿಂದಿಗೆ
ತುಂಬಿ ಹೋಯಿತು
ನೆನಪಿನ ಬುತ್ತಿ
ಬಿಚ್ಚಿಕೊಂಡಿತು
~~~~~~~~~~~~~~~~~
ಮಳೆ
ಭುವಿಯಿಂದ ಆವಿಯಾಗಿ
ಗಗನವನ್ನು ವರಿಸಲು
ಹೋಗಿದ್ದ ನೀರು
ನಿರಾಸೆಯಾಗಿ
ತಿರುಗಿ
ತವರಿಗೆ ಬಂತು

ಪರಿಪೂರ್ಣ ಬದುಕು



ದೊಡ್ಡದಾಗಿ ಅಡ್ಡಡ್ಡ ಬೆಳೆವ
ಬೃಹತ್ ನೀಲಗಿರಿಯ ಮರದಂತೆ
ನೂರಾರು ವರ್ಷ ನಿಂತು
ಬೋಳಾಗಿ ಬಿದ್ದು ಹೋಗುವುದು ಬದುಕಲ್ಲ…
ವಸಂತ ಕಾಲದ
ಒಂದೇ ದಿನ ಆಯಸ್ಸಿನ
ನೈದಿಲೆಯ ಹೂವಂತೆ
ಅದೇ ರಾತ್ರಿ ಉದುರಿ ಸತ್ತರೂ
ಮನದಲ್ಲಚ್ಚಳಿಯದ ಭಾವ..
ಚಿಕ್ಕದಾದರೂ ಅಪೂರ್ವ ಸೌಂದರ್ಯ
ಪರಿಪೂರ್ಣ ಬದುಕೆಂದರೆ ಹೀಗಿರಬೇಕು
ಚಿಕ್ಕದ್ದಾಗಿ ಚೊಕ್ಕವಾಗಿ…

ಇಂಗ್ಲೀಷ್ ಮೂಲ: ಬೆನ್ ಜಾನ್ಸನ್

ಮಂಗಳವಾರ, ಮಾರ್ಚ್ 16, 2010

ವಾನರನ ಬಾಯಾರಿಕೆ…!



ತುಮಕೂರಿನ ಪ್ರವಾಸಿ ಸ್ಥಳವಾದ ಶಿವಗಂಗೆಯ ಈ ಮಂಗಕ್ಕೆ ನೀರಡಿಕೆ ತಣಿಸಲು ಜ್ಯೂಸೇ ಬೇಕಂತೆ,ನೀವೆ ನೋಡಿ…!

ಹೊಸತನಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ರೈತ




ಇತ್ತೀಚೆಗಂತೂ ಯಾವ ದಿನಪತ್ರಿಕೆಗಳ ಮೇಲೆ ಕಣ್ಣು ಹಾಯಿಸಿದರೂ ಒಂದು ಸುದ್ದಿ ಮಾತ್ರ ಇದ್ದೇ ಇರುತ್ತೆ. “ರಸ್ತೆಗೆ ಟೊಮ್ಯಾಟೋ ಸುರಿದು ರೈತರ ಪ್ರತಿಭಟನೆ” ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಸುದ್ದಿಯ ಜೊತೆಗೊಂದು ಫೋಟೋ… ಚಂದದ ಟೊಮ್ಯಾಟೋಗಳನ್ನೆಲ್ಲ ಹಾಗೆ ಸುರಿದದ್ದನ್ನು ಕಂಡು ಎಷ್ಟೋ ಜನ “ಛೆ! ದಂಡ ಮಾಡ್ತಿದ್ದಾರಲ್ಲಾ..” ಎಂದು ಗೊಣಗಿದ್ದುಂಟು.

ಯಾಕೆ ಹೀಗಾಯ್ತು…? ರೈತರು ಬೆಳದಿದ್ದನ್ನು ಕೊಳ್ಳುವ ದಲ್ಲಾಳಿಗಳು ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದಾರೆ.ಕನಿಷ್ಠ ಬೆಲೆಯೂ ಸಿಗದೇ ಕೃಷಿಕ ಕಂಗಾಲಾಗಿದ್ದಾನೆ.
ಜಾಗತೀಕರಣ, ಆಧುನಿಕೀಕರಣದ ಈ ಹೊತ್ತಿನಲ್ಲಿ ಸಾಂಪ್ರದಾಯಿಕ ಕೃಷಿಗೆ ಹಿನ್ನಡೆ ಉಂಟಾಗಿದೆ. ಹೀಗಾಗಿ ಬದಲಾದ ಪರಿಸ್ತಿತಿಯಲ್ಲಿ ರೈತರು ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ. ಉದಾಹರಣೆಗೆ ಹೀಗೆ ವ್ಯರ್ಥವಾಗಿ ಟೊಮ್ಯಾಟೋಗಳನ್ನೂ ರಸ್ತೆಗೆ ಸುರಿಯುವ ಬದಲು ರೈತರು ತಮ್ಮ ಮನೆಯಲ್ಲೇ ಅದನ್ನು ಸಂಸ್ಕರಿಸಿ ಜಾಮ್, ಜೆಲ್ಲಿ ಮೊದಲಾದ ಮೌಲ್ಯವರ್ಧಿತ ಪದಾರ್ಥಗಳನ್ನಾಗಿ ಪರಿವರ್ತಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು.ಈ ಮೂಲಕಹೆಚ್ಚಿನ ಲಾಭ ಗಳಿಸಬಹುದು.ಸಮಾನ ಮನಸ್ಕರು ಒಂದೆಡೆ ಸೇರಿ ಇಂತಹ ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಲು ಬ್ಯಾಂಕುಗಳಿ0ದಲೂ ಹಣಕಾಸು ವ್ಯವಸ್ಥೆಯಿದೆ. (ಸರ್ಕಾರದಿಂದಲೂ ಹತ್ತು ಹಲವು ಉಪಯುಕ್ತ ಸೌಲಭ್ಯಗಳು ಲಭ್ಯವಿದ್ದರೂ ಅದು ಬಹುತೇಕ ಯೋಗ್ಯರನ್ನು ತಲುಪುತ್ತಿಲ್ಲವಷ್ಟೇ …!)

ಅವರವರದ್ದೇ ಹೊಲದ ಉತ್ಪನ್ನಗಳನ್ನು ಅವರೇ ಸಂಸ್ಕರಿಸಿ ನೇರ ಮಾರಾಟ ಮಾಡುವ ಮೂಲಕ ಯಶಸ್ವಿಯಾಗಬಹುದು. ಸೂಕ್ತ ಬೆಲೆ ಸಿಗದಿದ್ದಾಗ ಆತ್ಮಹತ್ಯೆಯಂತಹ ಆಲೋಚನೆ ಬಿಟ್ಟು, ನಿರಾಶರಾಗದೆ ಇಂತಹ ಪ್ರಯತ್ನಗಳಿಗೆ ಮುಂದಗಬಾರದೇಕೆ…??

ವಿಪರ್ಯಾಸ

ಧನದಾಹ ತೊರೆದು
ಬೆಟ್ಟದ ಮೇಲೆ ಬೆತ್ತಲೆ ನಿಂತ
ಬಾಹುಬಲಿಯ
ಕಾಲಿನ ಬಳಿ
ಕಾಣಿಕೆ ಹುಂಡಿ…!

# ## ## ## #

ತಣ್ಣನೆಯ
ನೀರಿನಲ್ಲೂ
ಬಿಸಿ ಸೂರ್ಯ
ಬಿಂಬಿಸುತ್ತಾನೆ…

# ## ## #

ಉಳುಮೆ ಮಾಡಿ
ಹೃದಯ ಸೀಳಿ
ಬಿತ್ತಿದರೂ
ಇಳೆ
ನಮಗೆ
ಹಸಿರನ್ನೇ
ಕೊಡುತ್ತಾಳೆ..

# ## ## #

ಕಾಲಡಿಯ
ಬೆಲೆಬಾಳುವ
ಮಣ್ಣನು ಬಿಟ್ಟು
ಕಡಲಾಳದ
ಬಿಳಿ ಮುತ್ತಿಗೆ
ಹಂಬಲಿಸುತ್ತೇವೆ…

ವಿವಾದ ಮತ್ತು ನನಗನ್ನಿಸಿದ್ದು…




ನಿಜಕ್ಕೂ ನಮ್ಮ ಭವಿಷ್ಯದ ಬಗ್ಗೆ ಯೋಚಿಸಿದಾಗಲೆಲ್ಲ ಒಂಥರಾ ತಳಮಳ ಉಂಟಾಗುತ್ತದೆ…

ಇತ್ತೀಚಿಗೆ ಹಾಸನ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಗಲಭೆ ನಡೆದಿದ್ದು ನಿಮಗೆ ಗೊತ್ತೇ ಇದೆ. ಕನ್ನಡ ಪ್ರಭದಲ್ಲಿ ಪ್ರಕಟವಾದ ‘ಪರ್ದಾ ಹೈ ಪರ್ದಾ’ ಎಂಬ ಲೇಖನ ವಿವಾದಕ್ಕೆ ಕಾರಣ. ಒಂದು ಆರೋಗ್ಯಕರ ಚರ್ಚೆಗೆ ಕಾರಣವಾಗಬೇಕಿದ್ದ ಬರಹ ಗಲಭೆಗೆ ಕಾರಣವಾಗಿ ಅಮಾಯಕರು ಬಲಿಯಾಗುವಂತಾಗಿದ್ದು ವಿಷಾದಕರ ಸಂಗತಿ.

ಇಷ್ಟಕ್ಕೂ ಆ ಬರಹದಲ್ಲಿ ಇದ್ದಿದಾದರೂ ಏನು…? ಬುರ್ಖಾ ಹಾಕುವ ಸಂಪ್ರದಾಯ ಹೇಗೆ ಪ್ರಾರಂಭವಾಗಿ ಈಗ ಯಾವ ಹಂತಕ್ಕೆ ತಲುಪಿದೆ ಎಂದಷ್ಟೇ ಅಲ್ಲಿ ವಿಶ್ಲೇಷಿಸಲಾಗಿದೆ. ಅಷ್ಟಕ್ಕೂ ಇದೇನೂ ಹೊಸ ವಿಚಾರವಲ್ಲ.ಹಲವಾರು ದಶಕಗಳಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ ಬದುಕುವ ದಾರಿ ತೋರಿಸಲೆಂದಿರುವ ಧರ್ಮ ಸ್ತ್ರೀಯರ ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಖಂಡಿತಾ ಸರಿಯಲ್ಲ. ಇದನ್ನು ಕಾಲಕ್ರಮೇಣ ಬದಲಾಯಿಸಿಕೊಂಡಿದ್ದರೆ ಎಲ್ಲವೂ ಸರಿಯಿರುತ್ತಿತ್ತು.ಆದರೆ ಹಾಗಾಗಲಿಲ್ಲ.

ತಪ್ಪನ್ನು ಎತ್ತಿ ತೋರಿದ್ದೇ ದೊಡ್ಡ ತಪ್ಪಾಯಿತೇನೋ…? ವಿಚಾರ ಮಾಡಲು ಸಾಮರ್ಥ್ಯವಿರದ ಅನೇಕರು ಗಲಾಟೆ ಮಾಡುವ ಉದ್ದೇಶ ಇಟ್ಟುಕೊಂಡೇ ಮೆರವಣಿಗೆಗಿಳಿದರು. ಅವರಿಗೊಂದು ನೆಪ ಬೇಕಿತ್ತಷ್ಟೇ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದಷ್ಟೇ ಅಲ್ಲದೆ ತಮ್ಮ ಪಾಡಿಗೆ ತಾವಿದ್ದ ಆಟೋ ಡ್ರೈವರುಗಳಂತಹ ಅಮಾಯಕರ ಮೇಲೆ ಹಲ್ಲೆ ನಡೆಸಿದರು. ಇದರಿಂದ ಕೋಪಗೊಂಡ ಹಿಂದುಗಳೂ ಪ್ರತಿಧಾಳಿ ನಡೆಸಿದರು. ಅಲ್ಲೂ ತುತ್ತಾಗಿದ್ದು ಅಮಾಯಕರೆ… ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಎರೆಡೂ ಧರ್ಮಗಳ ಪ್ರಜ್ಞಾವಂತರ್ಯಾರೂ ಗಲಭೆಗೆ ಇಳಿಯಲಿಲ್ಲ. ಧರ್ಮದ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಮಾಡಿದ ಕೃತ್ಯ ಎಲ್ಲರಿಗೂ ಕೆಟ್ಟ ಹೆಸರು ತಂದಿತಷ್ಟೆ.

ಇದಕ್ಕೆಲ್ಲಾ ಮೂಲ ಕಾರಣ ನಮ್ಮವರ ವಿಚಾರ ಶಕ್ತಿಯ ಕೊರತೆ. ಯಾರೋ ಎಂದೋ ಹೇಳಿದ್ದನ್ನ, ಮಾಡಿದ್ದನ್ನ, ಬರೆದಿದ್ದನ್ನ ಇಂದಿಗೂ ನಾವು ಯಥಾವತ್ತಾಗಿ ಅನುಕರಿಸುವ ಭರದಲ್ಲಿ ವೈಚಾರಿಕತೆಯನ್ನೇ ಕಳೆದುಕೊಂಡಿದ್ದೇವೆ. ಬದುಕಿನ ಸುಭದ್ರತೆಗಾಗಿ ಹುಟ್ಟಿಕೊಂಡ ದೇವರ ಕಲ್ಪನೆ, ಧರ್ಮದ ಆಚರಣೆಗಳು ಕಂದಾಚಾರಗಳಾಗಿ ಬದಲಾಗಿ ಅರ್ಥಹೀನ ಎನಿಸಿಕೊಳ್ಳುತ್ತಿರುವುದು ದುರಾದೃಷ್ಟಕರ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮನುಕುಲದ ನಾಶಕ್ಕಿದು ಮುನ್ನುಡಿಯಾದೀತು.

ಇನ್ನೊಬ್ಬನಿಗೆ ಕೆಟ್ಟದು ಮಾಡಬಾರದು,ಮತ್ತೊಬ್ಬರ ಬದುಕಿಗೆ ಹಾನಿ ಮಾಡಬಾರದು,ಸಮಾಜಕ್ಕೆ ಹಿತವಾಗುವಂತಹ ಕೆಲಸಗಳನ್ನು ಮಾಡಬೇಕು, ದುಷ್ಟ ಕಾರ್ಯಗಳನ್ನು ದೂರವಿಡಬೇಕು ಅಂತೆಲ್ಲ ಹೇಳಿಕೊಡೋಕೆ ನಮಗೆ ಬೈಬಲ್, ಕುರಾನ್,ಭಗವದ್ಗೀತೆಗಳೇ ಬೇಕಾ…? ನಮ್ಮ ಯೋಚನಾ ಶಕ್ತಿಗೆ ತುಕ್ಕು ಹಿಡಿಸದೆ ಮಾನವೀಯತೆಯಿಂದ ಯೋಚಿಸಿದರೆ ಇವೆಲ್ಲಾ ತಿಳಿದೀತು.ಸ್ವತಂತ್ರ್ಯವಾಗಿ ಯೋಚಿಸೋಕೂ ನಾವು ಅಸಮರ್ಥರೇ …? ಇಷ್ಟಕ್ಕೂ ಪವಿತ್ರ ಗ್ರಂಥಗಳಲ್ಲಿ ಹೇಳಿದ ಒಳ್ಳೆಯ ಅಂಶಗಳನ್ನೆಲ್ಲಾ ನಾವು ಆಚರಣೆಗೆ ತಂದಿದ್ದೆವೆಯೇ…?

ಈ ಎಲ್ಲ ದೇವರು-ಧರ್ಮದ ಮೌಡ್ಯಗಳನ್ನು ತೊರೆದು ,ವೈಚಾರಿಕತೆ ಎಲ್ಲರಲ್ಲೂ ಉದಿಸಿ ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ‘ವಿಶ್ವಮಾನವ’ರಾಗಿ ಶಾಂತಿ-ಸಹನೆಯ ಬಾಳ್ವೆ ನಡೆಸುವುದು ಯಾವಾಗ…?