ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಗುರುವಾರ, ಏಪ್ರಿಲ್ 5, 2012

ನಿರವಯವ ಹಾಗೂ ನಾಗರಾಜ ವಸ್ತಾರೆ...




ನಾಳೆ ವಸುಧೇಂದ್ರರ ಛಂದ ಪುಸ್ತಕಗಳ ಬಿಡುಗಡೆ ಸಮಾರಂಭವಿದೆ. ಅಲ್ಲಿ ನಮ್ಮೂರ ಕಥೆಗಾರ ನಾಗರಾಜ ವಸ್ತಾರೆಯವರ ಸಂಕಲನ 'ನಿರವಯವ' ಅನಾವರಣಗೊಳ್ಳಲಿದೆ....
ಇಷ್ಟಕ್ಕೂ ನಿರವಯವ ಎಂದರೇನು ಎಂಬ ಕುತೂಹಲಕಾರಿ ಚರ್ಚೆ ಫೇಸ್ಬುಕ್ಕಿನಲ್ಲಿ ನಡೆಯುತ್ತಿತ್ತು. ಅದಕ್ಕೆ ವಸ್ತಾರೆಯವರು ಉತ್ತರಿಸಿದ್ದು ಹೀಗೆ....


ನಿರವಯವ- ಅಂದರೆ ಸರಳವಾಗಿ ಅವಯವಯವಿಲ್ಲದ್ದು ಅಂತ ಅರ್ಥೈಸಬಹುದೇನೋ. 

ವಸುವಿನ ಪ್ರಕಾರ, ಅವನೊಮ್ಮೆ ಹೇಳಿದ ಹಾಗೆ- ಅದು ಅನಂಗ, ಅರ್ಥಾತ್ ಕಾಮ! ಸ್ಸಾರಿ... ನಾನು ಹಾಗೆ ಯೋಚಿಸಿಯೇ ಇರಲಿಲ್ಲ. 

ಇಂಗ್ಲಿಶ್ನಲ್ಲಿ ಆರ್ಗ್ಯಾನಿಕ್ (organ-ic) ಅನ್ನೋ ಬಳಕೆ ಇದೆ ನೋಡಿ- ಅದನ್ನ ಕನ್ನಡದ ಭೂಪರು ಸಾವಯವ (-ಅವಯವ) ಅಂತ ಬಳಸುತ್ತಾರೆ. ಆರ್ಗ್ಯಾನಿಕ್ಅನ್ನುವುದನ್ನು ಎಲ್ಲ ಸೃಜನಶೀಲ ಕ್ಷೇತ್ರದ ಮಂದಿಯೂ ಬಳಸುತ್ತಾರೆ ಅನಿಸುತ್ತೆ. (ಎಸ್. ಆರ್. ವಿಜಯಶಂಕರರು ಆಗಾಗ- ಅಂದರೆ ಎಲ್ಲರ ಕೃತಿಗಳ ಮೇಲೂಸಾವಯವಶಿಲ್ಪದ ಸಮಗ್ರೀಕರಣಅಂತೇನನ್ನೋ ಹೇಳುತ್ತಾರೆ!!) ನನಗೆ ತಿಳಿದ ಮಟ್ಟಿಗೆ ಆರ್ಗ್ಯಾನಿಕ್ ಅಂದರೆ ತಂತಾನೇ ಆಗಿರ್ಓದು ಅಂತ ಅರ್ಥ. ಅಂದರೆ ಯಾವುದೇ ಬುದ್ಧಿ (ಬೌದ್ಧಿಕವಾದ) ಸರ್ಕಸುಗಳಿಲ್ಲದೆ ತನ್ನಷ್ಟಕ್ಕೆ ಆಗಿರ್ಓದು. ನಮ್ಮ ಹಳೆಯ ಊರುಗಳು ಆಗಿರುವುದು ಹೀಗೆ. ಹೊಸ ಊರುಗಳಲ್ಲಿ ಆಗುವ ಹಾಗೆ ದೊಡ್ಡ ದೊಡ್ಡ ಡಿಗರಿಗಳಿರುವ ಇಂಜಿನಿಯರು, ಆರ್ಕಿಟೆಕ್ಟುಗಳು ಪ್ರಜ್ಞಾಪೂರ್ವಕವಾಗಿ ಇಂತಹ ಊರುಗಳನ್ನು ಕಟ್ಟಿರುವುದಿಲ್ಲ. ಹಾಗಾಗಿಯೇ ಊರುಗಳು ಸಾವಯವವಿರುತ್ತವೆ. ಅಂದರೆ ಅವುಗಳಲ್ಲೇನೋ ಜೀವಂತಿಕೆಯಿದೆ. ಸಾವಯವವೆನ್ನುವುದಕ್ಕೆ ವ್ಯತಿರಿಕ್ತವಾಗಿ ನಿರವಯವ ಅಂತನ್ನುವ ಪ್ರಯೋಗವಿದೆ. ಅಂದರೆ- ಇನಾರ್ಗ್ಯಾನಿಕ್ (in-organ-ic). ಇದನ್ನು ಜೀವಂತಿಕೆಯಿಲ್ಲದ್ದು ಅನ್ನಬಹುದೆ? ಹಾಗೆ ನೋಡಿದರೆ ನಮ್ಮ ದೊಡ್ಡ ದೊಡ್ಡ ಊರುಗಳೆಲ್ಲ ಇಂಥವು. ಬರೇ ಯಾಂತ್ರಿಕ. ಬುದ್ಧಿಯ ಕಸರತ್ತು ಮಾಡುವ ಮಂದಿ ಬರೆದಿಟ್ಟ ಪ್ರೋಗ್ರಾಮಿಗೆ ತಕ್ಕುದಾಗಿ ಜರುಗುವಂಥವು!

ಇನ್ನು ಕನ್ನಡದಲ್ಲಿ ಓದಲಾಗುವ ಖೆಮಿಸ್ಟ್ರಿಯಲ್ಲಿ- ಸಾವಯವ ರಸಾಯನ (organic chemistry), ನಿರವಯ ರಸಾಯನ (inorganic chemistry) ಅಂತನ್ನುವ ಪ್ರಯೋಗಗಳಿವೆ. ಇಲ್ಲಿ ಸಾವಯವ ಅಂತನ್ನುವುದು ಜೀವಿಗಳಿಗೆ ಸಂಬಂಧಿಸಿದ ಅಥವಾಜೀವವನ್ನು ಕಟ್ಟುವ ರಸಾಯನಗಳನ್ನು ಕುರಿತು ರೆಫರಿಸುತ್ತದೆ. ಗ್ಲುಕೋಸ್, ಸುಕ್ರೋಸ್... ಇತ್ಯಾದಿ ಸಕ್ಕರೆಗಳು, ಪ್ರೋಟೀನು-ಅಮಿನೋಆಮ್ಲಗಳು... ಇತ್ಯಾದಿಗಳುಸಾವವಯವವೆಂದು ನೆನಪಿಗೆ ಬರುತ್ತವೆ. ಹಾಗೆಯೇ ಖೆಮಿಸ್ಟ್ರಿಯಲ್ಲಿ ನಿರವಯವ- ಅಜೀವ/ನಿರ್ಜೀವ ವಸ್ತುಕಣಗಳಿಗೆ ಸಂಬಂಧಿಸಿದ್ದು. 

ವಿವರಣೆ ಹೆಚ್ಚಾಯಿತೇನೋ... ಇರಲಿ. 

ಇನ್ನು ನನ್ನನಿರವಯವಕ್ಕೆ ಸಂಬಂಧಿಸಿದ ಹಾಗೆ- ಒಂದೆರಡು ಮಾತು. ಅವಯವಗಳಿರುವ ನಾವೆಲ್ಲರೂ ಸಾವಯವರು. ನಮ್ಮೊಳಗೆ ಅವಯವವಿಲ್ಲದಇನ್ನೊಂದುಇದೆಯಲ್ಲ- ಒಳಗಿದ್ದು ನನ್ನನ್ನುನಾನುಅಂತ ಗಣಿಸುವುಂಥದು... ಅದು ನನ್ನ ಮಟ್ಟಿಗಿನ ನಿರವಯವ!
ದಯಮಾಡಿ ನನ್ನನಿರವಯವವನ್ನು ಕೊಂಡು ಓದಿ. ‘ಛಂದವನ್ನು ಉದ್ಧರಿಸಿ.  



ಬುಧವಾರ, ಮಾರ್ಚ್ 28, 2012

ಕುಲಾಂತರಿ ಚರ್ಚೆ ಬಗ್ಗೆ ಒಂದಿಷ್ಟು

ಕುಲಾಂತರಿಗಳ ಬಗ್ಗೆ  "ಕನ್ನಡಪ್ರಭ"  ಪತ್ರಿಕೆಯಲ್ಲಿ ಶಾಂತು ಶಾಂತಾರಾಮ್ ಹಾಗೂ ಎಮ್ ಮಹದೇವಪ್ಪ ಅವರು ಬರೆದ ಬರಹ ಓದುಗರನ್ನು ದಾರಿತಪ್ಪಿಸುವಂತಿದೆಯೇ ವಿನಹಾ ಅವುಗಳ ಕುರಿತು ಸರಿಯಾದ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದೆ. ಕುಲಾಂತರಿಗಳನ್ನು ಅಭಿವೃದ್ದಿಯ ಹೆಸರಲ್ಲಿ, ಅಧಿಕ ಅಹಾರ ಉತ್ಪಾದನೆಯ ನೆಪದಲ್ಲಿ ರೈತರ ಹಾಗೂ ಗ್ರಾಹಕರ ಮೇಲೆ ಹೇರುವ ಪ್ರಯತ್ನದ ಒಂದು ಭಾಗವಾಗಿ ಈ ಬರಹಗಳು ಮೂಡಿಬಂದಿವೆಯಷ್ಟೇ.

 ವಿಜ್ಞಾನವು ಸತ್ಯ ಶೋಧನೆಯಿಂದ ರೂಪಗೊಳ್ಳುವುದೇ ವಿನಹ ಸಂಖ್ಯಾ ಬಲದಿಂದಲ್ಲ ಎಂಬ ಮಹದೇವಪ್ಪನವರ ಮಾತುಗಳು ಒಪ್ಪತಕ್ಕದ್ದೇ . ಆದರೆ ಬಿ.ಟಿ. ಬದನೆ ಕುರಿತ ಚರ್ಚೆ ಯಲ್ಲಿ ವಿಜ್ಞಾನಿಗಳಿಗೆ ಸೂಕ್ತ ಕಾಲಾವಕಾಶ ಸಿಗಲಿಲ್ಲ ಎಂಬ ಮಾತು ಸತ್ಯಕ್ಕೆ ದೂರ. ತಾತ್ಕಾಲಿಕ ನಿಷೇಧ ಹೇರುವ ಮುನ್ನ ದೇಶದ ಹಲವೆಡೆಗಳಲ್ಲಿ ಪರ-ವಿರೋಧಗಳ ಬಗ್ಗೆ ಪರಿಸರ ಸಚಿವಾಲಯ ವಿಸ್ತೃತ ಚರ್ಚೆ ನಡೆಸಿತ್ತು. ಇಷ್ಟಲ್ಲದೇ  ದೇಶದ ಪ್ರತಿಷ್ಟಿತ ಆರು ವಿಜ್ಞಾನ ಅಕಾಡೆಮಿಗಳಿಂದ ಅಭಿಪ್ರಾಯ ಕೇಳಿತ್ತು. ಆದರೆ ಅಲ್ಲಿನ ವಿಜ್ಞಾನಿಗಳು ಕೊಟ್ಟ ಬೇಜಾವಾಬ್ದಾರಿಯುತ ವರದಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದು ನೆನಪಿರಬಹುದು. ಎಲ್ಲದಕ್ಕೂ ವೈಜ್ಞಾನಿಕ ಆಧಾರ ಕೇಳುವವರು ತಮ್ಮ ವರದಿಯ ಬಗ್ಗೆ ಏಕೆ ಚಕಾರ ಎತ್ತುವುದಿಲ್ಲ? ಅಲ್ಲೇಕೆ ಯಾವುದೇ ವೈಜ್ಞಾನಿಕ ಆಧಾರ ನೀಡದೇ ತೀರ ಕಳಪೆ ಗುಣಮಟ್ಟದ ವರದಿ ಕೊಟ್ಟರು?

ಬಿ.ಟಿ. ಹತ್ತಿ ಬಂದ ಮೇಲೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಹತ್ತಿ ರಫ್ತು ಮಾಡುವ ದೇಶವಾಯ್ತೆಂದು ಹೆಮ್ಮೆಯಿಂದ ಹೇಳುವವರು ಇತ್ತೀಚೆಗೆ ಹತ್ತಿಯ ಒಟ್ಟಾರೆ ಉತ್ಪಾದನೆ ಕಡಿಮೆಯಾಗಿದೆಯೆಂದು ಕೇಂದ್ರ ರಫ್ತು ನಿಷೇಧ ಮಾಡಲು ಹೊರಟಿದ್ದನ್ನೇಕೆ ಪ್ರಜ್ನಾಪೂರ್ವಕವಾಗಿ ಮರೆಮಾಚುತ್ತಾರೆ? ದೇಶದ ಶೇಕಡಾ 93ರಷ್ಟು ಭಾಗದಲ್ಲಿ ಬಿ.ಟಿ.ಹತ್ತಿಯನ್ನೇ ಬೆಳೆಯುತ್ತಿದ್ದರೂ ಹೀಗಾಗಿದ್ದೇಕೆ?!

ಸದ್ಯ ನಮ್ಮ ಮಾರುಕಟ್ಟೆಯಲ್ಲಿರುವ ಎಲ್ಲ ಕುಲಾಂತರಿ ತಳಿಗಳು ಖಾಸಗೀ ಕಂಪನಿಗಳಿಂದಲೇ ಬಂದವು. ಸರ್ಕಾರಿ ಸ್ವಾಮ್ಯದ ಸಂಸ್ತೆಗಳು ಇನ್ನೂ ಅಂಬೆಗಾಲಿಕ್ಕುತ್ತಿವೆಯಷ್ಟೆ. ಮೊನ್ಸಾಂಟೋ ಕಂಪನಿಯ ಬಿ.ಟಿ. ಜೀನನ್ನು ತೋರಿಸಿ ತಾವು ತಯಾರಿಸಿದ್ದೆಂದು ಹೇಳಿ ಸಿಕ್ಕಿಹಾಕಿಕೊಂಡ ಧಾರವಾಡ ಹಾಗೂ ದೆಹಲಿಯ ಕೃಷಿ ವಿಜ್ಞಾನಿಗಳ ಪ್ರಕರಣವನ್ನು ಇಲ್ಲಿ ನೆನಪಿಸಿಕೊಂಡರೆ ತಪ್ಪಾಗಲಾರದು. ಹೀಗೇ ಆದರೆ ಇನ್ನೊಂದು ದಶಕ ಕಳೆದರೂ ಸರ್ಕಾರಿ ರಂಗದಿಂದ ಬಿ.ಟಿ. ಅಭಿವೃದ್ದಿ ಅನುಮಾನ. ಅಷ್ತರಲ್ಲಿ ಖಾಸಗೀ ಕಂಪನಿಗಳು ರೈತರನ್ನು ತಮ್ಮ ಕಪಿಮುಷ್ಟಿಯೊಳಗೆ ಹಿಡಿದಿರುವುದರಲ್ಲಿ ಅನುಮಾನವಿಲ್ಲ. ಇನ್ನು ರೈತರೇ ಇದರ ಬೀಜೋತ್ಪಾದನೆ ಮಾಡಿಕೊಳ್ಳಬಹುದೆಂಬ ಹಸಿ ಸುಳ್ಳನ್ನೇಕೆ ಹೇಳುತ್ತಾರೆಂಬುದು ಅರ್ಥವಾಗದು.

ವೈಜ್ಞಾನಿಕ ಸಂಶೋಧನೆ ನಡೆಸಿ ಸುರಕ್ಷಿತ ಎಂದು ಸಾಬೀತಾದವುಗಳನ್ನು ಬಳಸಬಹುದೆನ್ನುತ್ತಲೇ ಸುರಕ್ಷತೆಗಾಗಿ ಯಾವ್ಯಾವ ಪರೀಕ್ಷೆ ಮಾಡಾಬೇಕೆಂದು ಸೂಚಿಸಿದ ಪುಷ್ಪ ಭಾರ್ಗವರ ಮೆಲೆ ಹರಿಹಾಯುವುದು ಪೂರ್ವಾಗ್ರಹವಲ್ಲದೇ ಮತ್ತೇನು?
ಹಸಿರು ಕ್ರಾಂತಿಯ ಗಡಿಬಿಡಿಯಲ್ಲಿ ನಾವು ಮಾಡಿದ ಅದ್ವಾನಗಳು ಈಗಷ್ಟೇ ಅರಿವಿಗೆ ಬರುತ್ತಿರುವಾಗ ಮತ್ತೊಂದು ಹಸಿರು ಕ್ರಾಂತಿ ಮಾಡುವ ಮುನ್ನ ಅದರಿಂದಾಗಬಹುದಾದ ಹಾನಿಕಾರಕ ಪರಿಣಾಮಗಳ ಬಗ್ಗೆ ಈಗಲೇ ಯೋಚಿಸಿ, ಸೂಕ್ತ ಸಂಶೋಧನೆ ನಡೆಸಿ ನಿವಾರಿಸಿಕೊಳ್ಳಬೇಕಿದೆ. ಕುಲಾಂತರಿಗಳ ಬಗ್ಗೆ ಇನ್ನೂ ವಿರೋಧಾಭಾಸ ಅಭಿಪ್ರಾಯಗಳು ವಿಜ್ಞಾನಿಗಳಲ್ಲೆ ಇರುವಾಗ ಅವನ್ನು ಮಾರುಕಟ್ಟೆಗೆ ಬಿಡಬೇಕೆನ್ನುವುದರ ಹಿಂದೆ ಕಾರ್ಪೋರೇಟ್ ಲಾಬಿಯಿದೆಯೇ ಹೊರತು ಮತ್ತೇನಲ್ಲ.

ಕುಲಾಂತರಿ ಬೀಜಗಳನ್ನು ಮೊದಮೊದಲಿಗೆ ಕಡಿಮೆ ಬೆಲೆಗೆ ಮಾರಿ ಒಮ್ಮೆಗೆ ನಾಲ್ಕು ಪಟ್ಟು ಬೆಲೆ ಏರಿಸಿದರೆ ರೈತರ ಸ್ತಿತಿ ಏನಾಗಬೇಡ? ತನ್ನಲ್ಲಿದ್ದ ದೇಶಿ ತಳಿಗಳ ಬೀಜವನ್ನು ಕಳೆದುಕೊಂಡು ಬೇರೆ ದಾರಿಯಿಲ್ಲದೇ ಕಂಪನಿಗಳ ಬಾಗಿಲು ಬಡಿಯುವ ರೈತನ ಸ್ತಿತಿಯನ್ನು ಆಧುನಿಕ ವಸಾಹತುಶಾಹಿಯ ಪರಿಣಾಮ ಅನ್ನದೇ ವಿಧಿಯಿಲ್ಲ. ಡಾಲರ್ ಲೆಕ್ಕದಲ್ಲಿ ಸಂಬಳ ಎಣಿಸುವವರಿಗೆ ನಮ್ಮ ಸಣ್ಣ ಹಿಡುವಳಿದಾರರಿಗೆ 1000 ರೂಪಾಯಿಯೂ ದೊಡ್ದ ವೊತ್ತ ಎಂಬುದು ಅರ್ಥವಾಗುವುದಿಲ್ಲ.

ಎಲ್ಲದಕ್ಕೂ ವೈಜ್ಞಾನಿಕ ಆಧಾರ ಕೇಳುವವರು ಬಿ.ಟಿ.ಯ ಹಾನಿಕಾರಕ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಸಂಶೋಧನಾ ಪ್ರಭಂಧಗಳನ್ನೇಕೆ ಮರೆಮಾಚುತ್ತಾರೆಂದು ಅರ್ಥವಾಗದು. ಮೊನಾರ್ಕ್ ಚಿಟ್ಟೆ, ಲೇಸ್ವಿಂಗ್ ಮೊದಲಾದ ನಿರಪಾಯಕಾರಿ ಕೀಟಗಳಿಗೆ ಬಿ.ಟಿ. ವಿಶಕಾರಿ ಎಂಬ ಬಗ್ಗೆ ಸಾಕಷ್ಟು  ವೈಜ್ನಾನಿಕ ಮಾಹಿತಿ ಇದೆಯಲ್ಲಾ?!

ಇನ್ನು ಶಾಂತು ಶಾಂತಾರಾಮರ ರೈತಪರ ಕಳಕಳಿ ಎಷ್ತಿದೆ ಅನ್ನೊದು ಗೊತ್ತಾಗಬೇಕಾದರೆ ಅವರೇ ಕೇರಳದಲ್ಲಿ ನಡೆದ ಸಮಾರಂಭವೊಂದರಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಬೇಕು “if any of us are the seed companies or in the seed business, would we like ourcustomers to approach us only once? Why wouldn't we like our business to multiply? Wouldn't it be economically viable for us to ensure that farmers buy seed from us every year? “  ಇದು ಅವರು ಮಾಡುತ್ತಿರುವ ಕಾರ್ಪೋರೆಟ್  ಲಾಬಿಯಲ್ಲದೇ ಮತ್ತೇನು?

ಇಷ್ಟಕ್ಕೂ ಶಾಂತಾರಾಮರು ಕೃಷಿ ಜೈವಿಕ ತಂತ್ರಜ್ಞಾನದ ದೈತ್ಯ ಕಂಪನಿ 'ಸಿಂಜೆಂಟಾ'ದ ಉದ್ಯೋಗಿಯಾಗಿದ್ದವರು. ಕುಲಾಂತರಿಗಳನ್ನೆ ಉಸಿರಾಡುತ್ತಿರುವ ಹನ್ನೆರೆಡು ಜಾಗತಿಕ ಕಂಪನಿಗಳ ಮುಖವಾಣಿಯಾದ ABLE-AG(Association of Biotech LeadEnterprices-Agriculture Group)ನ ಮುಖ್ಯಸ್ತರಾಗಿರುವವರು. 'ಬಯಾಲಜಿಕ್ಸ್ ಇಂಟೆನ್ರ್ಯಾಶನಲ್' ಎಂಬ ತಮ್ಮದೇ ಆದ ಸಂಸ್ತೆಯೊಂದನ್ನು ಕಟ್ಟಿಕೊಂಡು ಜೈವಿಕ ತಂತ್ರಜ್ಞಾನ ಕಂಪನಿಗಳಿಗೆ ಸಲಹೆ ಕೊಡುತ್ತಿರುವವರು. ಅವರಿಗೆ ರೈತಪರ ಕಳಕಳಿಗಿಂತ ಕಾರ್ಪೋರೇಟ್ ಕಳಕಳಿಯೇ ಹೆಚ್ಚಾಗಿ ಇದ್ದಂತಿದೆ!

ಭಾರತೀಯ ಕೃಷಿಕ ಹಾಡುತ್ತ ಕುಣಿಯುತ್ತ ಸ್ತಳೀಯವಾಗಿ ಲಭ್ಯವಿದ್ದುದನ್ನೇ ಬಳಸಿಕೊಂಡು ಖುಶಿಯಿಂದ ಕೃಷಿ ಮಾಡಿದ್ದುಕೊಂಡವ. ಅಭಿವೃದ್ದಿಯ ಹೆಸರಲ್ಲಿ ಆತನಿಗೆ ದೇಶಕ್ಕೆಲ್ಲ ಅನ್ನವುಣಿಸುವ ಜವಾಬ್ದಾರಿ ಕೊಟ್ಟು, ಭೂಮಿ ಕಿತ್ತುಕೊಳ್ಳುತ್ತಾ ಈಗಾಗಲೆ ಸಾಕಷ್ಟು ಸಂಕಷ್ಟಗಳಿಗೆ ಈಡು ಮಾಡಿದ್ದೇವೆ. ಹೀಗೇ ಆದರೆ ಇನ್ನವನನ್ನು ಬಹುರಾಷ್ಟ್ರೀಯ ಕಂಪನಿಗಳ ಜೀತಕ್ಕಿಡುವ ದಿನಗಳೂ ದೂರವಿಲ್ಲ ಎನಿಸುತ್ತಿದೆ.. ..

ಗುರುವಾರ, ಮಾರ್ಚ್ 1, 2012

ಒಂದು ಬೆಳ್ಳಿ ಕೂದಲು


ಮೊನ್ನೆ ಒಂದು ಭಾನುವಾರದಂದು
ಲೇಟಾಗೆದ್ದು, ಹಲ್ಲುಜ್ಜಿ ಕಾಫಿ ಹೀರಿ
ಹಾಡುಹೇಳುತ್ತಾ ಸ್ನಾನ ಮಾಡಿ
ಕನ್ನಡಿ ಮುಂದೆ ತಲೆ ಒರೆಸಿಕೊಳ್ಳುತ್ತಾ
ನಿಂತವನಿಗೆ ತಲೆಯಲ್ಲೇನೋ
ಫಳ್ ಎಂದು ಹೊಳೆದಂತಾಯ್ತು...

ನನ್ನಂಥ ಟ್ಯೂಬ್‍ಲೈಟು ಕವಿಗೆ
ಆಗೀಗ ಹಾಗೆ ಝಗ್ಗನೆ ಸ್ಪೂರ್ತಿ
ಉಕ್ಕುವುದು ಹೊಸತಲ್ಲ ಬಿಡಿ...

ಆದರೆ ಈ ಬಾರಿ ಹಾಗಲ್ಲ,
ಹೀಗೆ ಹೊಳೆದಿದ್ದು ತಲೆಯೊಳಗಲ್ಲ,
ಅದೊಂದು ಬೆಳ್ಳಿ ಕೂದಲು!

ಅರೆ! ಅರವತ್ತಾದ ಮೇಲೆ
ಬಣ್ಣ ಬದಲಿಸಬೆಕಾದ್ದು
ಈಗಲೇ ಫಳಫಳಿಸಿದರೆ ಹೇಗೆ?!
ಅದೂ ನನ್ನಂಥ ಮೊನ್ನೆ ಮೊನ್ನೆ
ಟೀನೇಜು ಜಾರಿಸಿದವನಿಗೆ...?
ತಲೆ ಕೆರೆದು ಯೋಚಿಸಿದೆ,
ಒಂದಿಷ್ಟು ಕೂದಲುದುರಿತೇ ವಿನಃ
ಉತ್ತರ ಸಿಗಲಿಲ್ಲ...


ತಲೆಬಿಸಿಯಾಯ್ತು...
ನನಗಿನ್ನೂ ಇಪ್ಪತ್ತೈದಾಗಿಲ್ಲ,
ಮದುವೆ ಆಗಿಲ್ಲ; ಹೋಗಲಿ,
ಹುಡುಗಿಯನ್ನೂ ಹುಡುಕಿಕೊಂಡಿಲ್ಲ!
ಈಗಷ್ಟೇ ಅಆಇಈ ಮುಗಿಸಿ
ಕಾಲೇಜು ಮೆಟ್ಟಿಲೇರಿದವನಿಗೆ
ಕೂದಲು ಬೆಳ್ಳಗಾಗಲು ಕಾರಣವೇ ಇಲ್ಲ...

ಇರಬಹುದೇ ಇದು
ತಲೆತುಂಬಾ ತುಂಬಿಕೊಂಡ
ಟೆನ್ಶನ್ನುಗಳ ಫಲ?
ಮಾಲಿನ್ಯ? ವಿಷವುಳ್ಳ ಆಹಾರ?
ಅಥವಾ ನನ್ನ ಚಂದದ ಕೂದಲ ಮೇಲೆ
ಯಾರದೋ ಹೊಟ್ಟೆಕಿಚ್ಚು?!

ತಲೆ ಕೊಡವಿದೆ;
ಹೋಗಲಿ ಬಿಡಿ, ಯಾಕಿಷ್ಟು ಚಿಂತೆ?
ಇಷ್ಟಕ್ಕೂ ಒಂದೇ ಒಂದು ಕೂದಲು ತಾನೇ..?
ಬಿಳಿಕೂದಲು ಬುದ್ದಿಜೀವಿಗಳ ಲಕ್ಷಣ!
ಆದರೂ...
ಸದ್ಯಕ್ಕೆ ಹೇರ್‌ಡೈ ಹಚ್ಚೋಣ..!!

ಬುಧವಾರ, ಫೆಬ್ರವರಿ 29, 2012

ಆಮ್ಲಜನಕ ಎಂಬ ’ಅಮೂಲ್ಯ ಅಮೃತ’ ಮತ್ತು ’ವಿಶೇಷ ವಿಷ’

ಆಕ್ಸಿಜನ್ ಅಲಿಯಾಸ್ ಆಮ್ಲಜನಕ ಗೊತ್ತಲ್ಲ? ನಾವಾಡುವ ಪ್ರತೀ ಉಸಿರಿನ ಅಮೂಲ್ಯ ಪ್ರಾಣವಾಯು ಅದು. ಜಗತ್ತಿನ ಬಹುತೇಕ ಜೀವಗಳ ಪಾಲಿನ ಅಮೃತವಿದು. ಕೆಲ ನಿಮಿಷಗಳಷ್ಟರ ಮಟ್ಟಿಗೆ ಆಮ್ಲಜನಕ ಸಿಗಲಿಲ್ಲವೆಂದರೂ ಹೃದಯ ನಿಂತುಹೋಗುತ್ತದೆ.ಆಮ್ಲಜನಕವನ್ನೇ ನಂಬಿಕೊಂಡ ಮಿದುಳೂ ಕೈಕೊಡುತ್ತದೆ.ಇಂತಹ ಅಮೂಲ್ಯ ಗಾಳಿ ಹಿಂದೊಮ್ಮೆ ಜೀವಜಗತ್ತಿಗೆ ವಿಷವಾಗಿ ಪರಿಣಮಿಸಿದ್ದು ನಿಮಗೆ ಗೊತ್ತಾ..?

ಮೂರ್ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಈ ಭೂಮಿಯಲ್ಲಿ ಜೀವೋದಯವಾದಾಗ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿತ್ತು. ಹೀಗಾಗಿ ಬ್ಯಾಕ್ಟಿರಿಯಾಗಳಂತಹ ಮೊದಮೊದಲ ಜೀವಿಗಳು ಆಹಾರದಿಂದ ಶಕ್ತಿಪಡೆಯಲು ಆಮ್ಲಜನಕವನ್ನು ಬಳಸಲೇ ಇಲ್ಲ. ಅಂಥಾ ಜೀವಿಗಳ ಸಂತತಿ ಇಂದಿಗೂ ಇದೆ. ಆದರೆ ಸಯನೋಬ್ಯಾಕ್ಟಿರಿಯಾಗಳೆಂಬ ವಿಶಿಷ್ಟ ’ಜಲಜನಕ ಪ್ರಿಯ’ ಜೀವಿಗಳು ನೀರನ್ನೊಡೆದು ಜಲಜನಕ ಪಡೆದು ಆಮ್ಲಜನಕವನ್ನು ವಾತಾವರಣಕ್ಕೆ ಸೇರಿಸಿಬಿಡುತ್ತಿದ್ದವು.

ಹೀಗೇ ಸುಮಾರು ಎರೆಡು ಬಿಲಿಯನ್ ವರ್ಷಗಳಾಗುವ ಹೊತ್ತಿಗೆ ವಾತಾವರಣದಲ್ಲಿ ಹಿಂದೊಮ್ಮೆ ನಗಣ್ಯ ಎನಿಸಿದ್ದ ಆಮ್ಲಜನಕದ ಪ್ರಮಾಣ ಶೇಕಡಾ ೨೦ರಷ್ಟಾಯಿತು. ನೆನಪಿಡಿ, ಇದೊಂದು ತೀರಾತೀರ ಅಪಾಯಕಾರಿ ಅನಿಲ. ಕಬ್ಬಿಣದಂತಹಾ ಕಬ್ಬಿಣಕ್ಕೇ ತುಕ್ಕು ಹಿಡಿಸಿಬಿಡುತ್ತದೆ. ನಮ್ಮ ದೇಹದ ಮೂಲಾಧಾರಗಳಾದ ರಂಜಕ, ಗಂಧಕಗಳನ್ನೆಲ್ಲಾ ದುರ್ಬಲಗೊಳಿಸುವ ಶಕ್ತಿ ಇದಕ್ಕಿದೆ. ಹೀಗಾಗಿ ಜೀವಜಗತ್ತು ಆಮ್ಲಜನಕದ ವಿರುದ್ದ ಸೆಣೆಸುವುದು ಅನಿವಾರ್ಯವಾಯಿತು. ಕೆಲಜೀವಿಗಳು ಹೊಸ ಹೊಸ ರೂಪ ತಳೆದು ಆಮ್ಲಜನಕವನ್ನು ’ಕೊಲ್ಲುವ’ ಶಸ್ತ್ರಾಸ್ತ್ರ ರೂಪಿಸಿಕೊಂಡವು.ಹಲವು ಸೋಲೊಪ್ಪಿಕೊಂಡು ವಿನಾಶವಾದವು....


ಕುತೂಹಲಕಾರಿ ಸಂಗತಿಯೆಂದರೆ ಹೀಗೆ ಆಮ್ಲಜನಕದ ಪ್ರಮಾಣ ಹೆಚ್ಚಾಗಲು ಕಾರಣವಾದ ಸಯನೋಬ್ಯಾಕ್ಟೀರಿಯಾಗಳು ಅದರಿಂದ ಹೆಚ್ಚಿನ ಶಕ್ತಿ ಪಡೆಯುವ ದಾರಿಯನ್ನೂ ತೋರಿಸಿಕೊಟ್ಟವು. ಇವುಗಳು ಬೇರೆ ಪ್ರಭೇದದ ಜೀವಿಗಳೊಂದಿಗೆ ಕೊಡುಕೊಳ್ಳುವಿಕೆಯನ್ನು ಶುರುವಿಟ್ಟುಕೊಂಡವು. ಕೊನೆಗೆ ಅವುಗಳ ದೇಹದ ಭಾಗಗಳೇ ಆಗಿ ಹೋದವು!

ಹೀಗೆ ದೇಹದ ಒಳಹೊಕ್ಕ ಬ್ಯಾಕ್ಟೀರಿಯಾಗಳೇ ನಮ್ಮ ಜೀವಕೋಶದ ಶಕ್ತಿಕೇಂದ್ರ ’ಮೈಟೋಕಾಂಡ್ರಿಯಾ’ಗಳಾದವೆಂದು ೧೯೭೦ರ ಆರಂಭದಲ್ಲೇ ಲಿನ್ನ್ ಮಾರ್ಗೂಲಿಸ್ ಎಂಬ ವಿಜ್ನಾನಿ ಹೇಳಿದ್ದಳು. ಆದರೆ ಅವಳ ವಿಕಾಸವಾದದ ಹೊಸ ಥಿಯರಿಗೆ ಮನ್ನಣೆ ಸಿಗಲು ವರ್ಷಗಳೇ ಬೇಕಾದವು. ಮೈಟೋಕಾಂಡ್ರಿಯಾಗಳು ತಮ್ಮದೇ ಆದ ಡಿಎನ್ ಎ ಹೊಂದಿ ನಮ್ಮೊಳಗಿದ್ದೂ ನಮ್ಮಂತಾಗದ ಕಥೆ ಇನ್ನೂ ಕುತೂಹಲಕಾರಿ....


ಈ ಜೀವಜಗತ್ತಿನಲ್ಲಿ ಇನ್ನೂ ಏನೇನು ಬೆರಗುಗಳಿವೆಯೋ...?!