ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಬುಧವಾರ, ನವೆಂಬರ್ 30, 2011

ಅನೈತಿಕತೆ ಮತ್ತು ಉಳಿವಿಗಾಗಿ ಹೋರಾಟ…


ಕಳೆದ ಗುರುವಾರ ತಮ್ಮ ವಿಜ್ನಾನ-ವಿಶೇಷ ಅಂಕಣದಲ್ಲಿ ನಾಗೇಶ ಹೆಗಡೆ ಅವರು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುತ್ತಾ

ಸಸ್ಯ-ಪ್ರಾಣಿಗಳೂ ‘ಅನೈತಿಕ’ ಕೆಲಸ ಮಾಡುತ್ತವೆ ಎಂದಿದ್ದರು.”ನಮ್ಮ ಭ್ರಷ್ಟರೇನಾದರೂ ಇದನ್ನೋದಿದರೆ ತಮ್ಮ ಕೆಲಸ ಪ್ರಕೃತಿ ಸಹಜ ಎಂದು ಸಮರ್ಥಿಸಿಕೊಂಡಾರು!” ಎಂದವರಿಗೆ ಮೆಸೇಜಿಸಿದ್ದೆ. Yes! You are right about political animals! ಎಂದರು ನಾಗೇಶ ಹೆಗಡೆ…
ಹೋಗಲಿ ಬಿಡಿ.ಹಾಳು ರಾಜಕೀಯದ ಕಥೆ ನಮಗ್ಯಾಕೆ? ಆದರೆ ಈ ಪಾಪದ ಸಸ್ಯ-ಪ್ರಾಣಿಗಳು ಅಂಥಾ ‘ಅನೈತಿಕ ಕೆಲಸ’ ಏನು ಮಾಡಿಯಾವು? ಪ್ರಾಣಿಗಳಾದರೋ ಕದ್ದು ಕೂತು, ಬೇಟೆ ಆಡಿ ಹಿಂಸಿಸಿ ಕೊಂದು ತಿಂದು ಮಾಡುತ್ತವೆ, ಆದರೆ ಈ ಸಸ್ಯಗಳು? ಅವೆಂಥಾ ಸುಳ್ಳು, ಮೋಸ ಧಗಾ ವಂಚನೆ ಮಾಡಲು ಸಾಧ್ಯ..?!
“ನಿಜಕ್ಕೂ ಸಸ್ಯಗಳು ಸದಾ ಯುದ್ದ ಸನ್ನದ್ದವಾದ ಸೈನಿಕರು.ಕೆಲವೊಮ್ಮೆ ಸಾಮೂಹಿಕ ಹತ್ಯಾ ಶಸ್ತ್ರಾಸ್ತ್ರ, ಜೊತೆಗೆ ಗೂಂಡಾ ಪಡೆ ಇಟ್ಟುಕೊಂಡ ಕ್ರೂರ ಭಯೋತ್ಪಾದಕರೂ ಆಗಿರಬಹುದು.ಇಲ್ಲವೇ ಸಿನಿಮೀಯ ರೀತಿಯಲ್ಲಿ ಲೂಟಿಮಾಡುವ ಹೈಟೆಕ್ ಕಳ್ಳರಿರಬಹುದು” ಅಂತಾರೆ ಸಸ್ಯಗಲ ವರ್ತನೆ ಬಗ್ಗೆ ಅಧ್ಯಯನ ಮಾಡಿರುವ ಪೀಟರ್ ಸ್ಕಾಟ್!
ಸಾಮಾನ್ಯವಾಗಿ ಗಿಡಗಳು ತಯಾರಿಸಿದ್ದರಲ್ಲಿ(ಎಲೆ ಹಣ್ಣು ಇತ್ಯಾದಿ) ಶೇಕಡಾ 18ರಷ್ಟು ಪ್ರಾಣಿಗಳ ಪಾಲಾಗುತ್ತವೆ. ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕೀಟಗಳೇ ತಿಂದು ತೇಗುತ್ತವೆ. ತಮ್ಮತ್ತ ಬಂದ ಆಕ್ರಮಣಕಾರರಿಂದ ಓಡಿ ತಪ್ಪಿಸಿಕೊಳ್ಳಲಂತೂ ಅವಕ್ಕೆ ಆಗುವುದಿಲ್ಲವಲ್ಲ, ಹೀಗಾಗಿ ಅವಕ್ಕೆ ಇಂತಹಾ ಪ್ರಕೃತಿ ದತ್ತ ಶಕ್ತಿ ಅನಿವಾರ್ಯ.
ಭಕ್ಷಕಗಳಿಂದ ರಕ್ಷಿಸಿಕೊಳ್ಲಲು ಪ್ರತಿಯೊಂದು ಜಾತಿಯ ಸಸ್ಯವೂ ಹಲವು ರೀತಿಯ ಸಂರಕ್ಷಣಾ ವ್ಯವಸ್ತೆ ಹೊಂದಿರುತ್ತದೆ.ಅದು ನೇರಾನೇರ ಚುಚ್ಚುವುದು ಇರಬಹುದು ಅಥವಾ ಎಲೆಗಳ ಮೂಲಕ ವಿಶವುಣಿಸುವುದಿರಬಹುದು!ಕಾಂಡ,ರೆಂಬೆ,ಎಲೆಗಳ ಮೇಲೆ ಮುಳ್ಳುಗಳಿರುವುದು ಮೊದಲ ರೀತಿಯದು.ತಿನ್ನಲು ಬಾಯಿ ಹಾಕಿದ ಪ್ರಾಣಿಯ ಬಾಯಿತುಂಬಾ ತೂತುಗಳು! ಒಮ್ಮೆ ಚುಚ್ಚಿಸಿಕೊಂದರೆ ಮತ್ತೊಮ್ಮೆ ಹತ್ತಿರವೂ ಬರಲಿಕ್ಕಿಲ್ಲ. ಕೆಲ ಹುಲ್ಲುಗಳಂತೂ ಎಲೆಗಳಿಗೆ ಸಿಲಿಕೇಟ್ ಲೇಪಿಸಿಕೊಂಡು ಚೂಪಾದ ಬ್ಲೇಡಿನ ರೀತಿ ಇರುತ್ತವೆ.ತಾಗಿಸಿಕೊಂಡರೆ ಚರ್ಮ ತೂತಾಗುವುದು ಗ್ಯಾರಂಟಿ!
ತುರಿಕೆ ಗಿಡ(ಅಥವಾ ತುರ್ಚೆ ಗಿಡ/Poison Ivy)ದ್ದು ಇನ್ನೊಂದು ರೀತಿ.ಅದು ತನ್ನೆಲೆಗಳ ಮೇಲೆಲ್ಲಾ Urushiol ಎನ್ನುವ ಎಣ್ಣೆಯನ್ನು ಲೇಪಿಸಿಕೊಂಡಿರುತ್ತದೆ.ನೀವೇನಾದರೂ ಅದರ ಎಲೆ ಮುಟ್ಟಿದರೆ ಈ ಎಣ್ಣೆ ನಿಮ್ಮ ಸ್ಪರ್ಶ ಜ್ನಾನದ ದಿಕ್ಕು ತಪ್ಪಿಸಿ ಸುಳ್ಳುಸುಳ್ಳೇ ತುರಿಕೆ ಅಗುವಹಾಗೆ ಮಾಡುತ್ತದೆ.ವೆನಿಲ್ಲ ಗಿಡದ್ದೂ ಇದೇ ಕಥೆ.
ಇನ್ನು ಇದ್ದಿದ್ದೆಲ್ಲಾ ನನಗೇ ಬೇಕು ಎನ್ನುವ ಸಸ್ಯಗಳಿಗೇನೂ ಕಮ್ಮಿಯಿಲ್ಲ.ನೀಲಗಿರಿಯಂತಹ ಮರಗಳು ತಮ್ಮ ಸುತ್ತಮುತ್ತ ಸಾಮಾನ್ಯವಾಗಿ ಯಾವ ಗಿಡಗಳನ್ನೂ ಬೆಳೆಯಲು ಬಿಡುವುದಿಲ್ಲ.ಗಾಳಿ.ನೀರು,ಮಣ್ಣು ಎಲ್ಲೆಡೆ ವಿಷ ಹಬ್ಬಿಸಿ, ಬೇರೆ ಬೀಜಗಳು ಮೊಳಕೆಯೊಡೆಯುವುದನ್ನೂ ತಪ್ಪಿಸಿ, ಅಷ್ಟೂ ಪೋಷಕಾಂಶಗಳನ್ನು ತಾವೇ ಹೀರುತ್ತವೆ, ನಮ್ಮ ರಾಜಕಾರಣಿಗಳಂತೆ!
ಇನ್ನು ವಂಚನೆಯ ವಿಷಯಕ್ಕೆ ಬರೋಣ.ಕೆಲವು ಗಿಡಗಳು ತಮ್ಮೆಲೆಗಳ ಮೇಲೆ ಕಪ್ಪು ಚುಕ್ಕಿಗಳನ್ನು ಬೇಕಂತಲೇ ಮೂಡಿಸಿಕೊಳ್ಳುತ್ತವೆ. ಪ್ರಾಣಿಗಳು ಇದನ್ನು ದೂರದಿಂದಲೇ ನೋಡಿ,ಇರುವೆ ಇರಬಹುದೆಂದು ಭಾವಿಸಿ ಕಚ್ಚಿಸಿಕೊಳ್ಳುವ ಭಯದಿಂದ ಪಲಾಯನಗೈಯುತ್ತವೆ!
ಗೂಂಡಾಗಿರಿ?! ಅದೂ ಇದೆ! ಈವರೆಗೆ ಗುರುತಿಸಲಾದ 1000ಕ್ಕೂ ಹೆಚ್ಚು ಸಸ್ಯಗಳು ಇರುವೆಗಳೂ ಸೇರಿದಂತೆ ಹಲವಾರು ಕೀಟಗಳನ್ನು ತಮ್ಮ ರಕ್ಷಣೆಗೆಂದು ಸಾಕಿಕೊಳ್ಳುತ್ತವೆ.ಇವು ಒಂದಿಷ್ಟು ಸಿಹಿ ಮಕರಂದ ಹೀರಿ ನಿಯತ್ತಾಗಿ ಗಿಡಗಳ ಸೇವೆ ಮಾಡುತ್ತವೆ. ಎಲೆ ತಿನ್ನಲು ಬರುವ ಪ್ರಾಣಿಗಳಿಗೆ ಕಚ್ಚಿ-ಚುಚ್ಚಿ ತಮ್ಮ ಸ್ವಾಮಿನಿಷ್ಟೆ ತೋರಿಸುತ್ತವೆ.ಆಫ್ರಿಕಾದ ಒಂದು ಜಾತಿಯ ಅಕೇಶಿಯಾದಲ್ಲಿ ಗೂಡು ಕಟ್ಟುವ ಕೆಲ ಇರುವೆಗಳಂತೂ “ಎಲೆಯೂಟ” ಮಾಡಲು ಬರುವ ಜಿರಾಫೆಯೇ ಎದ್ದು-ಬಿದ್ದು ಓಡುವಂತೆ ಕಚ್ಚುತ್ತವಂತೆ!!

ಇನ್ನು ಗಿಲೀಟು ತೋರಿಸಿ, ಸುವಾಸನೆ ಪಸರಿಸಿ, ಕೀಟಗಳ ದಿಕ್ಕು ತಪ್ಪಿಸಿ ಮೋಸದಿಂದ ಎಲೆಯೊಳಗೆ ಜಾರಿಸಿ ಜೀರ್ಣಮಾಡಿಕೊಳ್ಳುವ ಕೀಟಾಹಾರಿ ಸಸ್ಯಗಳ ಬಗ್ಗೆ ನಿಮಗೆ ಗೊತ್ತಿರಬಹುದು…
“ಇವೆಲ್ಲ ಜೀವಿಗಳು ತಮ್ಮ ಉಳಿವಿಗಾಗಿ ನಡೆಸುವ ಹೋರಾಟ” ಎಂದ ಡಾರ್ವಿನ್.ಅದು ನೈತಿಕವೋ ಅನೈತಿಕವೋ ಎಂಬ ನಿರ್ಧಾರ ನಿಮಗೇ ಬಿಟ್ಟಿದ್ದು! ಇಷ್ಟಕ್ಕೂ ನೈತಿಕ ಅನೈತಿಕತೆಗಳ ನಡುವಿನ ಗೆರೆ ಎಲ್ಲಿದೆ?!
(ನೆನಪಿರಲಿ: ಆಗ ಸ್ವಾತಂತ್ರಕ್ಕಾಗಿ ಹೋರಾಡಿದವರೆಲ್ಲಾ ಬ್ರಿಟೀಷರ ಕಣ್ಣಲ್ಲಿ ರಾಜ ದ್ರೋಹಿಗಳು. ಆದರೆ ನಮಗೀಗ ಅವರು ದೇಶಭಕ್ತರು.ಕಾಶ್ಮೀರಕ್ಕೇನಾದರೂ ಸ್ವಾತಂತ್ಯ ಸಿಕ್ಕರೆ ಈಗಿನ ಭಯೋತ್ಪಾದಕರೆಲ್ಲಾ ಕಾಶ್ಮೀರದ ರಾಷ್ಟ್ರಭಕ್ತರೆನಿಸಿಕೊಳ್ಳುತ್ತಾರೆ!)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ